ಮತ್ತೊಬ್ಬ ಗೆಳೆಯನ ಕವಿತೆ…


ಬೆಂಗಳೂರಿಗೆ ದೂರವೆನಿಸುವ ಬಳ್ಳಾರಿಯ ಕೊಟ್ಟೂರಿನಲ್ಲೊಬ್ಬ ಗೆಳೆಯನಿದ್ದಾನೆ. ಹೆಸರು, ಸಿದ್ಧು ದೇವರಮನಿ. ಗೆಳೆತನದ ವಿಶೇಷವೆಂದರೆ, ಅವನು ಗಾಢವಾದ ಕವಿತೆಗಳನ್ನ ಬರೀತಾನೆ, ಮತ್ತು ಅದರಿಂದಲೇ ನನಗೆ ಪರಿಚಿತನಾಗಿದ್ದಾನೆ.

ಬರಹ ನನಗೆ ಏನು ಕೊಟ್ಟಿದೆ? ಅಂತ ಕೇಳಿದರೆ ಹೊಟ್ಟೆಬಟ್ಟೆಗಿಂತಲೂ ಹೆಚ್ಚಾಗಿ ಸಾಕಷ್ಟು ಗೆಳೆಯರನ್ನು ಕೊಟ್ಟಿದೆ ಎಂದು ತುಂಬು ಮನಸಿನಿಂದ ಹೇಳಿಕೊಳ್ತೇನೆ. ಅಂತಹ ಕೆಲವು ಖುಷಿಖುಷಿಯ ಗೆಳೆಯರಲ್ಲಿ ಈತನೂ ಒಬ್ಬ. ಅಲ್ಲದೆ, ನನ್ನನ್ನು ‘ಗಾನಾ’ ಎಂದು ಕರೆಯುವ ಕೆಲವೇ ಮಂದಿಯಲ್ಲೊಬ್ಬ. ಸಿದ್ಧು ದೇವರಮನಿಯ ಕವಿತೆಗಳಲ್ಲಿ ನನಗಿಷ್ಟವಾದ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ ಹಾಕಿದ್ದೇನೆ. ಓದಿಕೊಳ್ಳಿ.

ಅಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!

ನಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಭೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.

ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.

ಆಗಿನ್ನು ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡ ಬೀಳಿಸುತ್ತಿರುವ ಯ೦ತ್ರದ ಸದ್ದು.
ಆ ಕತ್ತಲು ಹೆದರಿಸಿತು…
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೋದವು.
ನಮಗೆ ಗೊತ್ತಗದೆ ನಾವು ಕತ್ತಲಿನ ಆಜ್ಞೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು!
ಏನಾಗುತ್ತಿದೆ…ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸ೦ದಭ೯ದ ಎಲ್ಲ ಸವಾಲುಗಳನ್ನು ಖುಶಿಪಟ್ಟೆ
ಕತ್ತಲು ಸರಿದ೦ತಾಯಿತು
ಈ ಜಗತ್ತು ಅದಕ್ಕೆ ” ಮು೦ಜಾವು” ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರೂ ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು “ಮಿನ್ನು” ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಭ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.

            

yes_i_can-siddudev  

  – ೨ –

ಬಯಲಿಗೆ ಬಿದ್ದ ಎಲ್ಲ ವಸ್ತುಗಳೊ೦ದಿಗೆ
ನಾವು ನಮ್ಮತನವನ್ನು ಕಾಯುತಿದ್ದೆವು.

ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
” ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ ”
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.

ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವೂ ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ ’ರೀತು’ ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊ೦ಡಿದ್ದೇನೆ..
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.

_ ಸಿದ್ದು ದೇವರಮನಿ

6 thoughts on “ಮತ್ತೊಬ್ಬ ಗೆಳೆಯನ ಕವಿತೆ…

Add yours

  1. ಚೇತೂ,
    ದಂಗುಬಿದ್ದುಹೋದೆ ಓದಿದಮೇಲೆ. ಮೊದಲು ಈ ಕವಿಯ ಪರಿಚಯ ಮಾಡಿಸು, ನನ್ನ ಮೆಚ್ಚುಗೆ ತಿಳಿಸಬೇಕು. ಉಫ್!! ಎಂಥ ಕವಿತೆಗಳು ಮಾರಾಯಿತಿ!!
    -ಟೀನಾ

  2. ಚೇತನಾ, ಸಿದ್ದು ಕವಿತೆ ಗಾಢವಾಗಿ ತಟ್ಟಿತು. ಇದೀಗ ಅದರ ಹಿನ್ನೆಲೆ ಗೊತ್ತಾದ ಮೇಲಂತೂ ಇನ್ನಷ್ಟು ದಂಗಾಗಿ ಹೋದೆ. “ಟೊಪ್ಪಿಗೆಯೆತ್ತಿ ತಲೆ ತಗ್ಗಿಸಿ ವಂದನೆ”- ಸಿದ್ದುವಿಗೂ, ಪರಿಚಯಿಸಿ ಪ್ರಕಟಿಸಿದ ನಿಮಗೂ.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑