‘ಸಾಂಗತ್ಯ’ದ ಸಂಗಾತ…


ದಿನಾಂಕ ೨.೧.೨೦೦೯ರ ರಾತ್ರಿ ಒಂಭತ್ತೂವರೆಗೆ ಮನೆಯಿಂದ ಹೊರಟ ನಾನು, ಟೀನಾ ಒಂಭತ್ತೂ ಐವತ್ತಕ್ಕೆ ಮೆಜಸ್ಟಿಕ್ ಸೇರಿ, ಸ್ವಲ್ಪ ಹೊತ್ತಿಗೇ ಬಂದುನಿಂತಿದ್ದ ಬಿಳಿಯ ಬಸ್ಸನ್ನ ಮಹರಾಯನೊಬ್ಬ ‘ಚಿಕ್ ಮಗ್ಳೂರ್ ಬಸ್ಸು’ ಅಂದು, ನಾವು ಆಸುಪಾಸಿನ ಜನರನ್ನ ‘ಇವ್ರೂ ಕುಪ್ಪಳ್ಳಿಗೆ ಹೊಂಟವರಿರಬೇಕು’ ಅಂತ ಗುಮಾನಿ ಕಣ್ಣಲ್ಲಿ ನೋಡುತ್ತ ಗಾಸಿಪ್ ಮಾಡ್ಕೊಂಡು ಕುಂತಿರುವಾಗ ಇದ್ದಕ್ಕಿದ್ದ ಹಾಗೇ ಟೀನಾ ತಲೆಮೇಲೆ ಬೋಧಿವೃಕ್ಷ ಚಿಗುರಿ, ‘ಮತ್ತೊಂದ್ಸಲ ವಿಚಾರಿಸ್ಕೊಂಡ್ ಬಾರೇ’ ಅಂದು, ನಾನು ಹೋಗಿ ಕೇಳಲಾಗಿ ಅದೇ ಬಿಳಿ ಬಸ್ಸು ಕುಪ್ಪಳ್ಳಿಗೆ ಹೋಗೋದು ಗ್ಯಾರಂಟಿಯಾಗಿ, ನಮ್ಮ ಪೆದ್ದುತನಕ್ಕೆ ಬಿದ್ದೂ ಬಿದ್ದೂ ನಗುತ್ತ ಬಸ್ ಹತ್ತಿದಾಗ ಟೈಮು ಹತ್ತೂ ಇಪ್ಪತ್ತೆಂಟು. ಡಿಪಾರ್ಚರಿಗೆ ಬರೀ ಎರಡು ನಿಮಿಶ ಬಾಕಿ!
~
ಹೀಗೆ ನಾವು ಹೋಗಿದ್ದು ಕುಪ್ಪಳ್ಳಿಯಲ್ಲಿ ‘ಸಾಂಗತ್ಯ’ ವತಿಯಿಂದ ಆಯೋಜನೆಯಾಗಿದ್ದ ಚಿತ್ರೋತ್ಸವಕ್ಕೆ. ಅರವಿಂದ ನಾವಡ, ವಾದಿರಾಜ್, ಸುಧೀರ್ ಕುಮಾರ್, ಮ್ಧು ಮೊದಲಾದ ಮಿತ್ರರು ಇದರ ಹೊನೆ ಹೊತ್ತಿದ್ದರು. “ಏನೇನೋ… ಹೆಂಗ್ ಹೆಂಗೋ…” ಅಂದ್ಕೊಂಡೇ ಕುಪ್ಪಳ್ಳಿಯಲ್ಲಿ ಬಸ್ಸಿಳಿದ ನಾವು ಅಲ್ಲಿನ ವ್ಯವಸ್ಥೆಗೆ, ಅಚ್ಚುಕಟ್ಟುತನಕ್ಕೆ ದಂಗುಬಡಿದು ಹೋದೆವು. ನಮ್ಮ ಪುಣ್ಯದಿಂದಾಗೇ ೨೯ಕ್ಕ್ಕೆ ಕುವೆಂಪು ಶತಮಾನೋತ್ಸವ ಭವನದಲ್ಲೊಂದು ಎ.ವಿ ಹಾಲ್ ಉದ್ಘಾಟನೆಯಾಗಿತ್ತು. ಅಲ್ಲಿ ನಮ್ಮ ಕಾರ್ಯಕ್ರಮವೇ ಮೊಟ್ಟಮೊದಲನೆಯದು! ( ಸಾಂಗತ್ಯ ಈಗ ‘ಅವರ’ ಟೀಮ್ ಆಗಿ ಉಳಿಯದೆ, ನಮ್ಮದೂ ಆಗಿಹೋಗಿದೆ!!)
~
ಅದು ಬಹಳ ಅಕ್ಕರೆಯಿಂದ ರೂಪಿಸಿದ ಚಿತ್ರೋತ್ಸವ. ಅದಕ್ಕಾಗಿ ಆಯ್ಕೆ ಮಾಡಿದ್ದ ಸಿನೆಮಾಗಳೂ ಒಂದಕ್ಕಿಂತ ಒಂದು ಭಿನ್ನ. ಅಲ್ಲಿ ಜಮಾವಣೆಯಾಗಿದ್ದವರೂ ಅಷ್ಟೇ… ಮೊದಲ ಸಾರ್ತಿ ಈ ಬಗೆಯ ಸಿನೆಮಾ ನೋಡ್ತಿರುವವರು, ನೋಡಿ ಮಾತಾಡ್ತಿರುವವರು, ಈಗಾಗಲೇ ಸಿನೆಮಾ ಹುಚ್ಚು ಹತ್ತಿಸ್ಕೊಂಡವರು… ಹೀಗೇ…
ವಾಪಸು ಹೊರಡುವ ಹೊತ್ತಿಗೆ ನಮಗೆಲ್ಲರಿಗೂ ಬರೀ ಕಥೆಯನ್ನಲ್ಲದೆ ಒಂದು ಸಿನೆಮಾದಲ್ಲಿ ಬೇರೆ ಏನೆಲ್ಲವನ್ನು ಗಮನಿಸಬಹುದು ಮತ್ತು ಯಾಕೆ ಗಮನಿಸಬೇಕು ಎನ್ನುವ ಬಗ್ಗೆ ಮೊದಲ ಪಾಠವಾಗಿತ್ತು. ಎಲ್ಲಿಯೂ ಬೋರ್ ಆಗದಂತೆ ಇಂಥದೊಂದು ಪಾಠವನ್ನು ಹೇಳಿಕೊಟ್ಟವರು ಪರಮೇಶ್ವರ ಗುರುಸ್ವಾಮಿ.
~
“ಪರಮೇಶ್ವರ ಗುರುಸ್ವಾಮಿಯವರನ್ನ ಕುಪ್ಪಳ್ಳಿಗೆ ಕರೀಬೇಕು ಅಂತಿದೀವಿ” ನಾವಡರು ಹೇಳಿದಾಗ ಖುಷಿಯಾಗಿಬಿಟ್ಟಿತ್ತು. ಅದಾಗಲೇ ಪ.ಗು ಅವರು ಮ್ಯಾಜಿಕ್ ಕಾರ್ಪೆಟ್ಟಿನಲ್ಲಿ ನನ್ನದೊಂದು ಸಿನೆಮಾ ಹುಡುಕಿಕೊಟ್ಟಿದ್ದರು. ಮಾತ್ರವಲ್ಲ, ಅದಕ್ಕೊಂದು ಚೆಂದದ ಟಿಪ್ಪಣಿಯನ್ನು ಕೂಡ ನೀಡಿದ್ದರು. ಎರಡು ದಿನವೂ ನಮ್ಮೊಡನೆ ನಮ್ಮಂತೆಯೇ ಇದ್ದ ಅವರ ಸಹವಾಸದಿಂಡ ಖುಷಿಯಾಗಿದ್ದು ಮಾತ್ರವಲ್ಲ, ಲಾಭವೂ ಆಯ್ತು. ಸಿನೆಮಾ ಬಗ್ಗೆ ಮಾತಿಗೆ ಶುರುವಿಟ್ತರೆ ಅದರ ಪ್ರತಿಯೊಂದು ಆಯಾಮವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ ಪ.ಗು, ತಾಂತ್ರಿಕವಾಗಿ ಒಂದು ಸಿನೆಮಾವನ್ನು ಹೇಗೆಲ್ಲ ಗಮನಿಸಬಹುದು , ಹೇಗೆ ನೋಡುಗ ಒಂದು ಸಿನೆಮಾಕ್ಕೆ ನ್ಯಾಯ ಸಲ್ಲಿಸಬಹುದು ಎನ್ನುವುದನ್ನು ಹೇಳಿಕೊಟ್ಟರು. ಅವರ ಸಿನೆಮಾ ಜ್ಞಾನ ಭಂಡಾರ ಅತ್ಯದ್ಭುತ.
~
ಈ ಚಿತ್ರೋತ್ಸವ ಆಯೋಜಿಸಿ, ನಮಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟ ನಾವಡರಿಗೆ ಥ್ಯಾಂಕ್ಸ್ ಹೇಳಿದರೆ, ಅವರು ‘ಸಾಂಗತ್ಯ’ ಟೀಮ್ ಕಡೆ ಕೈತೋರಿಸಿ ಜಾರಿಕೊಳ್ತಾರೆ. ಆದರೂ, ನಮಗೆ ಅವಕಾಶವಾಗಿದ್ದು ಅವರ ಮೂಲಕವೇ ಆಗಿರೋದ್ರಿಂದ ನಾವೂ ಪಟ್ಟುಬಿದದೆ ಅವರಿಗೇ ಮೊತ್ತಮೊದಲ ಥ್ಯಾಂಕ್ಸ್ ಹೇಳ್ತೇವೆ.
ಇನ್ನು ಕುಪ್ಪಳ್ಳಿಯ ಬಗ್ಗೆ ಹೇಳುವುದೇನು? ಆ ಹಸಿರು, ಕುವೆಂಪು ಮನೆ, ಕವಿ ಶೈಲ…
ಬಿಸಿ ನೀರು, ಹೊತ್ತುಹೊತ್ತಿಗೆ ರುಚಿರುಚಿಯಾದ ಊಟ-ತಿಂಡಿಗಳು, ಕಾಫಿ-ಟೀ…
ಉಳಿದುಕೊಳ್ಳಲಿಕ್ಕೆ ಸುಸಜ್ಜಿತ ಕೋಣೆ ಮತ್ತಿತರ ವ್ಯವಸ್ಥೆಗಳು…

ಎಲ್ಲಾ ಸರಿ, ಅಲ್ಲಿ ನೋಡಿದ ಫಿಲಮ್ಮುಗಳ ಬೆಗ್ಗೆ ಹೇಳಲೇ ಇಲ್ವಲ್ಲ ಅಂತ ಕೇಳ್ತೀರಾ? ಅದಕ್ಕಾಗೇ ಸಾಂಗತ್ಯ ಟೀಮ್ ಒಂದು ಬ್ಲಾಗ್ ಶುರು ಮಾಡಿದೆ. ಚಿತ್ರೋತ್ಸವದಲ್ಲಿ ನಾವು ನೋಡಿದ ಸಿನೆಮಾಗಳು, ಅದರ ವಿವರ, ಸಂವಾದ, ಸಾರಾಂಶಗಳು ಇವೆಲ್ಲವನ್ನೂ ನೀವು www.saangatya.wordpress.com  ನಲ್ಲಿ ನೋಡಬಹುದು.  ಓದಿ, ನೀವು ಬಾರದೆ ಹೋದುದಕ್ಕೆ ಹೊಟ್ಟೆ ಉರಿಸಿಕೊಳ್ಳಬಹುದು! ಸಿನೆಮಾ ಸಂವಾದಕ್ಕೆಂದೇ ಈ ಬ್ಲಾಗ್ ಇರುವುದರಿಂದ ನೀವೂ ಅದರಲ್ಲಿ ಭಾಗವಹಿಸಬಹುದು.

ಮುಂದಿನ ‘ಸಾಂಗತ್ಯ’ ಚಿತ್ರೋತ್ಸವದ ಕುರಿತ ಹೆಚ್ಚಿನ ಮಾಹಿತಿ- ವಿವರಗಳಿಗಾಗಿ, ಸಿನೆಮಾ ಕುರಿತ ಬರಹಗಳಿಗಾಗಿ saangatya@gmail.com ಗೆ ಮೇಲ್ ಮಾಡಿ.

13 thoughts on “‘ಸಾಂಗತ್ಯ’ದ ಸಂಗಾತ…

Add yours

  1. ಚೇತನಾರಿಗೆ ಧನ್ಯವಾದಗಳು.
    ನಿಜವಾಗಲೂ ಚಿತ್ರೋತ್ಸವ ಅಂದಗೊಳಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಒಂದು ಒಳ್ಳೆಯ ಕೆಲಸಕ್ಕೆ ಹತ್ತಾರು ಕೈಗಳು ಬೇಕು, ಆದರೆ ಅದನ್ನುಕೆಡಿಸಲು ಅಥವಾ ಕೆಟ್ಟ ಕೆಲಸ ಮಾಡಲು ಒಂದೆ ಮನಸ್ಸು ಸಾಕು.ಹಾಗಾಗಿ ನಿಮ್ಮೆಲ್ಲರ ಸಹಕಾರ ಚಿತ್ರೋತ್ಸವ ಚೆನ್ನಾಗಿ ಆಯಿತು. ಮತ್ತೊಂದು ಚಿತ್ರೋತ್ಸವ ಇಡುವ ಹುಮ್ಮಸ್ಸೂ ಬಂತು.
    ಸಾಂಗತ್ಯ

  2. ’ಸಾಂಗತ್ಯ’ದಲ್ಲಿ ಪರಮೇಶ್ವರ ಗುರುಸ್ವಾಮಿಯವರ ’ಸಾಂಗತ್ಯ’ ತುಂಬಾ ಚೆನ್ನಾಗಿತ್ತು… ಅದಕ್ಕಿಂತಾ ಅವರನ್ನು ಬೆಂಗಳೂರಿಗೆ ಕರ್ಕೊಂಡು ಬಂದ್ವಲ್ಲಾ, ಆ ಎಂಟು ತಾಸಿನ ರಾತ್ರಿ ಸಮಯ ಇನ್ನೂ ಚೆನ್ನಾಗಿತ್ತು.. ಬರೇ ಮಾತು, ಮಾತು ಮಾತು…. ತುಂಬಾ ಸರಳ ಮನುಷ್ಯ. ನಾಳೆ ಅವ್ರ ಮನೆಗೆ ಹೋಗ್ಬೇಕು… ಮತ್ತೆ ಮೈನಾ ಮನೆಗೆ ಕೂಡಾ. ಟೀನಾ ಮೇಡಮ್ ಊಟ ಹಾಕ್ತೀನಿ ಅಂದಿದಾರೆ. ಚೇತನಾ ಮೇಡಮ್ ಸ್ಪೆಷಲ್ ಊಟ ಹಾಕ್ತಾರಂತೆ 🙂

  3. ಚೇತನಾ

    ಚಿತ್ರಕುಲುಮೆಯಲ್ಲಿರೋ ಫೋಟೋದಲ್ಲಿ ಪ್ರೊಫೆಸರ್ ಥರಾ ಕಾಣ್ತೀರ್ರೀ..

    ಅಂದ ಹಾಗೆ ಕಲ್ಲಾರೆ ಊಟಕ್ಕೆ ಬರೋ ದಿನ ನಮಗೂ ಹೇಳಿ ನಾವೂ ಬರ್ತೀವಿ…

  4. ಸಾಂಗತ್ಯ,
    ಮತ್ತೊಮ್ಮೆ ಚಿತ್ರೋತ್ಸವ ನಡೆಸಿದಾಗ ನಮಗೆ ಮತ್ತೆ ಪಾಲ್ಗೊಳ್ಳೋ ಅವಕಾಶ ಕೊಡ್ತೀರಿ ತಾನೆ?

    ರಮೇಶ್,
    ಡಾನ್ ಗಳಿಗೆ ಅಲ್ಲಿ ಪ್ರವೇಶವಿಲ್ಲ 🙂

    ಗುರು,
    ಅಲ್ಲೇ ಇದ್ದು ನೀವು ಬರ್ಲಿಲ್ವಲ್ಲ?

    ಮಹೇಶ್,
    ಎಲ್ಲೆಲ್ಲಿ ಊಟ ಮುಗಿಸಿಕೊಂಡು ಬಂದ್ರಿ? ನನ್ಯಾಕೆ ಕರೀಲಿಲ? 😦
    ನನ್ನ ಸ್ಪೆಶಲ್ ಊಟ ಮಾಡೋದಕ್ಕೆ ನೀವು ಪುಣ್ಯ ಮಡಿರ್ಬೇಕು. ನಿಮ್ಮ ಖಾತೇಲಿ ಅದು ಇರೋ ಹಾಗೆ ಕಾಣ್ತಿಲ್ಲಪ್ಪ… 🙂

    ಶಮಾ,
    ಪ್ರೊ ಫೆ ಸ ರ್ ಥರಾನಾ..!? ಅಯ್ಯಬ್ಬ!!
    ಊಟದ ವಿಷಯ… ಮಹೇಶ್ ಗೆ ಹೇಳಿದ ಉತ್ತರವನ್ನ ಓದಿಕೊಂಡು ಬಿಡಿ. ಅಥವಾ, ನಿಮಗೆ ಡೈಯೆಟ್ ಮಾಡ್ಬೇಕು ಅನಿಸಿದ ದಿನ ನಮ್ಮನೇಗೆ ಊಟಕ್ಕೆ ಬನ್ನಿ 😉

    ನಲ್ಮೆ,
    ಚೇತನಾ

  5. ದೈಯಟ್ ಮತ್ತು ಶಮಾ… ನೋ ವೇ. ಚಾನ್ಸ್ ಇಲ್ಲಾರೀ… ನನ್ನ ಆಯುರ್ವೇದಿಕ್ ಪತಿ ಮಹಾಶಯನೇ ಸಾಧಾರಣ ದೈಯಟ್ ಮಾಡಿಸ್ತಾರೆ.. ಇನ್ನು ಬೇರೆ ಯಾಕೆ ? ಹೋಗ್ಲಿ … ನೀವೇ ಬನ್ನಿ ನಮ್ಮನೆಗೆ … ಅದ್ಭುತ (ಅದು ಭೂತ) ಅಡುಗೆ ಮಾಡಿ ಬಡಿಸ್ತೀನಿ… ಹೊಟ್ಟೆ ಕೆಟ್ಟರೆ ಯೋಚನೆ ಬೇಡ.. ಪಕ್ಕದಲ್ಲೇ ಕ್ಲಿನಿಕಿದೆ!!!!

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑