ಇದು ನಮ್ಮ ಅಳಿಲುಸೇವೆ, ನೀವೂ ಕೈಜೋಡಿಸ್ತೀರಾ?


ಹೌದು.  ತಮ್ಮೆಲ್ಲ ಸ್ವಾರ್ಥ, ಸ್ವಂತದ ತಲೆಬಿಸಿಗಳ ನಡುವೆಯೂ ನೈಸರ್ಗಿಕ ದುರಂತ, ಯುದ್ಧವೇ ಮೊದಲದ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುವ ಮೂಲಕ ನಮ್ಮ ಜನ ತಮ್ಮ ನೈಜ ಸಹೃದಯತೆಯನ್ನು ತೋರಿಸಿಕೊಟ್ಟಿದಾರೆ. ಸುನಾಮಿ ಬಂದೆರಗಿದಾಗ ಇತರ ದೇಶಗಲ ಸಹಾಯವನ್ನು ತಿರಸ್ಕರಿಸುವಷ್ಟು ಮಟ್ಟಿಗೆ ನಮ್ಮವರ ಸಹಾಯ ಕಾಣಿಕಎಗಳು ಹರಿದು ಬಂದಿತ್ತು, ಥೇಟ್ ಸುನಾಮಿಯ ಹಾಗೇ! ಜೊತೆಗೆ, ಅದನೆಲ್ಲ ಹಂಚುವ ಕೈಗಳು ಶುದ್ಧವಾಗಿರಬೇಕೆನ್ನುವುದಷ್ಟೆ ಗಮನಿಸಬೇಕಾದ ಸಂಗತಿ. ಅಂತಹ ಶುದ್ಧ ಹಸ್ತರಿಗೂ ಕಡಿಮೆಯೇನಿಲ್ಲ. ನಾವು ಅಷ್ಟೆಲ್ಲ ನಿರಾಶಾವಾದಿಗಳಾಗಬೇಕಿಲ್ಲ ಅಲ್ಲವೆ?

ಇರಲಿ. ಈಗ ಹೇಳಹೊರಟಿರೋದು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ದುರಂತದ ಬಗ್ಗೆ. ಅದರ ಜತೆಗೇ ಬೆಸೆದುಕೊಂಡ ರಾಜಕೀಯ ದುರಂತ ನಾಟಕದ ನಡುವೆಯೂ ಪರಿಹಾರ ಕಾರ್ಯ ನಡೇಯುತ್ತಿದೆ ಅನ್ನುವುದೇ ಸಮಾಧಾನ. ಇದಕ್ಕೆ ನಾಡಿನ ಹಲವು ಸರ್ಕಾರೇತರ ಸಂಘ ಸಂಸ್ಥೆಗಳ, ವ್ಯಕ್ತಿಗಳ ಕೊಡುಗೆ ಗಮನೀಯ.

ಈ ನಡುವೆ ನಮ್ಮ ಜಾಗೋಭಾರತ್ ತಂಡ ಕೂಡ ತನ್ನ ಅಳಿಲು ಸೇವೆಗೆ ಮುಂದಾಗಿದೆ. ಈ ಬಗ್ಗೆ ತಂಡದ ಸಾರಥಿ, ನನ್ನಣ್ಣ ಚಕ್ರವರ್ತಿ ನಿಮ್ಮೆಲ್ಲರನ್ನು ಕೈಜೋಡಿಸುವಂತೆ ಕೋರುತ್ತಿದ್ದಾನೆ…

ಜಾಗೋ ಭಾರತ್  ಹಾಗೂ ವಿವೇಕ ಹಂಸದ ಮನವಿ…

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.

ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.

ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….

~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ

ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑