ಕೃಷ್ಣ ಸಿಗುವುದಿಲ್ಲ. ಅದಕ್ಕೇ, ರಾಧೆ ಕಾಯಲಿಲ್ಲ…


ಮತ್ತೆ, ಅವನಿಲ್ಲ. ಇಷ್ಟಕ್ಕೂ ಅವನು ಇದ್ದಿದ್ದು ಯಾವಾಗ? ಚಂದ್ರನ ಹಾಗೇನೇ ಅವನ ಕಾರುಬಾರು. ಇರ್ತಾನೆ, ಇಲ್ಲವಾಗುವ ಭಯ ಹಚ್ಚಿಯೇ ಇರ್ತಾನೆ. ಮತ್ತೆ ಬಂದೇ ಬರ್ತಾನೆ ಅನ್ನುವ ಭರವಸೆ ಏನೋ ಸರಿಯೇ. ಆದರೆ ಅದು, ಹುಣ್ಣಿಮೆ ಕುಡಿಯಲಿಕ್ಕೆ ಕಾತರಿಸುವ ಚಕೋರಿಗಾಗಿಯಲ್ಲ. ಕಾಯಿಸುವವರೆಲ್ಲ ಹಾಗೇ. ಕಾಯುವವರಿಗಾಗಿ ಬರುವುದಿಲ್ಲ. ರಾಮ ಅಷ್ಟುದ್ದ ಹಾದಿ ನಡೆದು ಬಂದಿದ್ದು ಶಬರಿಗಾಗಿ ಅಲ್ಲವೇ ಅಲ್ಲ. ಪಾಪ, ಅವಳಿಗದು ಗೊತ್ತಿತ್ತಾ?

ಶಬರಿ… ಬೇಡರ ಹುಡುಗಿ. ಜಿಂಕೆ, ಮೊಲಗಳೊಟ್ಟಿಗೆ ಆಡ್ಕೊಂಡಿದ್ದವಳು. ಅವಳ ಮದುವೆ ಮಾಡಿ ಕಳಿಸುವಾಗ ಅವಳೆಲ್ಲ ಸಂಗಾತಿಗಳೂ ಗಂಡನ ಮನೆಗೆ ಹೋದವು. ಅವರಂತೂ ಸೊಸೆ ಭರ್ಜರಿ ತರಕಾರಿ ತಂದಿದಾಳೆ ಅಂತ ಕಡಿದು ಬೀಗರೂಟ ಹಾಕಿದರು. ಮಾರನೆ ಬೆಳಗು ಮೈದಡವಲಿಕ್ಕೆ ಹುಡುಕಿದರೆ, ಎಲ್ಲಿ ಜಿಂಕೆ? ಎಲ್ಲಿ ಮೊಲ, ಅದರ ಪುಟ್ಟ ಮರಿ?

ಶಬರಿಯ ಕರುಳು ಕಿವುಚಿತು. ಬದುಕೇ ನಶ್ವರ ಅನ್ನುವ ಸಂನ್ಯಾಸದ ಮೊದಲ ಪಾಠ ಬೋಧೆಯಾಯ್ತು. ಮತಂಗ ಮುನಿಯ ಪಾದದಡಿ ಬಿದ್ದಳು. ಅವರು ನಾರು ಮಡಿ ಕೊಟ್ಟು ಕಾಪಾಡಿದರು. ಶಬರಿಗೆ ರಾಮ ಬರಲಿದ್ದಾನೆ, ಕುಳಿತು ಕಾಯಿ ಅಂತ ಅದ್ಯಾರು ಹೇಳಿದರೋ, ಯಾಕೆ ಹೇಳಿದರೋ, ನಾನೋದಿದ ಹನ್ನೊಂದನೆ ಅಧ್ಯಾಯದಲ್ಲಿರಲಿಲ್ಲ…. ಅಂತೂ ಶಬರಿ ಕಾದಳು.

~

ಊರ್ಮಿಳೆಯೂ ಕಾದಿದ್ದಳು. ಘಮ್ಮಗೆ ಸ್ನಾನ ಮಾಡುತ್ತಾ (ಆ ಹರೆಯದಲ್ಲಿ, ಸುಮ್ಮನೆ ಸೆಳೆದವನ ಕನಸಿನಲ್ಲಿ) ಬಚ್ಚಲಲ್ಲಿ ಗಂಟೆಗಟ್ಟಲೆ ಉಳಿದಾಗ ಅಮ್ಮ ಬಯ್ತಿದ್ದಳು, ‘ಎಂತ ಊರ್ಮಿಳೆ ಸ್ನಾನವೇ ನಿಂದು? ಮುಗ್ಸಿ ಬರ್ತೀಯೋ ಇಲ್ಲೋ?’ ಲಕ್ಷ್ಮಣ ಬರೋವರೆಗೂ ಆ ಹೆಂಡತಿ ಬಚ್ಚಲಲ್ಲೇ ಬದುಕಿದ್ದಳು ಅನ್ಸುತ್ತೆ. ಕೊನೆಗೂ ಬಂದ ಲಕ್ಷ್ಮಣ. ಅಣ್ಣ ಬಂದಿದ್ದಕ್ಕೆ, ತಾನೂ ಬಂದ. ಮನೆಗೆ ಬರಲೇಬೇಕಿದ್ದಕ್ಕೆ ಬಂದ. ರೂಲ್ಸೇ ಹಾಗಿತ್ತು, ಹದಿನಾಲ್ಕು ವರ್ಷ ವನವಾಸ ಮುಗಿಸಿ ಬರಬೇಕಿತ್ತು, ಲಕ್ಷ್ಮಣ ಬಂದೇಬಂದ. ಊರ್ಮಿಳೆ ಕಾದಿದ್ದ ಕಾವಿಗೆ ಬೆಂದಿದ್ದೇನು?

~

ಸದ್ಯ! ರಾಧೆ ಕಾಯಲಿಲ್ಲ. ಕೃಷ್ಣ ಬರಲೂ ಇಲ್ಲ.

ಹೊರಗೆ ತಣ್ಣಗೆ ಗಾಳಿ. ಅವನ ತುಂಟ ನಗು, ಕಿಡಿಗೇಡಿ ಕಣ್ಣು, ತೂಕಕ್ಕಿಟ್ಟ ಮಾತು… ಎಲ್ಲದರ ನೆನಪು. ಐಪಾಡಿನಲ್ಲಿ ಅನಂತಸ್ವಾಮಿ ಹಾಡು…

ಕಾದೆ ಕಾದೆ ಕಾದೆ ಕಾದೆ,

ನೀನು ಮಾತ್ರ ಬರದೆ ಹೋದೆ, ಓ ಎನ್ನ ರಾಧೆ… ಓ ಎನ್ನ ರಾಧೆ…

ತಡಿ… ಅರೆ! ಕೃಷ್ಣ ಕಾಯ್ತಿದಾನಿಲ್ಲಿ, ಹಾಡಿನಲ್ಲಿ ರಾಧೆಗೆ! ನನ್ನ ಕೃಷ್ಣ ಎಲ್ಲಿ? ಕಾಯಬಾರದೆ ನನಗೆ!?

ಯಾವ ಯಮುನೆ ಎದೆಯ ಮೇಲೆ

ಕುಳಿತು ಹಾಡುತಿರುವೆ ಬಾಲೆ

ಓ ಎಲ್ಲಿ ಹೋದೆ?

ಯಮುನೆಯಾಗಿ ಹರಿದು ಬರುವೆ,

ನೆರೆಯ ಮುತ್ತು ಕೊಟ್ಟು ಕರೆವೆ,

ಬಾ ಎನ್ನ ರಾಧೆ… ಬಾ ಎನ್ನ ರಾಧೆ…

ಹಾಡಿನ ಪ್ರತಿ ಹನಿ ಅಮಲಿನಂತೆ ತುಂಬಿ ಚಡಪಡಿಕೆ.

~

ಸುಪ್ರಿಯಾ ಆಚಾರ್ಯಳ ದನಿ…. ‘ನೀ ಸಿಗದೆ, ಬಾಳೊಂದು ಬಾಳೇ ಕೃಷ್ಣ?’

ಬಹುಶಃ ಜೀಎಸ್ಸೆಸ್ ಕವಿತೆ.

‘ಮಡಿಗಳ ಮೀರದೆ ಆ ಮೋಹನನ ಪಡೆಯಬಹುದು ಹೇಗೆ?

ಗಡಿಗಳ ದಾಟದೆ ನದಿ ಸಾಗರವನು ಸೇರಬಹುದು ಹೇಗೆ!?

ಇಲ್ಲ… ಗಡಿ ದಾಟಲಾಗುವುದಿಲ್ಲ. ದಾಟದೆ ಕೃಷ್ಣ ಸಿಗುವುದಿಲ್ಲ. ಅದಕ್ಕೇ, ರಾಧೆ ಕಾಯಲಿಲ್ಲ. (ಮಡಿ ಬಿಟ್ಟವಳು ಗಡಿ ಬಿಡಲಿಲ್ಲ ಯಾಕೋ?)

~

ಯಾರೋ ಪುಣ್ಯಾತ್ಮರು ಹೇಳಿ ಹೋಗಿದ್ದಾರೆ. ‘ಕಾಯುವಿಕೆಗಿಂತ ತಪವು ಇನ್ನಿಲ್ಲ’ವಂತೆ. ಅದು ‘ತಾಪ’ ಅಂತಿದ್ದರೆ ಚೆನ್ನಾಗಿರುತ್ತಿತ್ತು. ಕಾದಿದ್ದು ಹೆಚ್ಚಾದರೆ ತಾಪಮಾನ ಏರುತ್ತದೆ, ಇವತ್ತಿನ ನಮ್ಮದು. ಕಾಯುವುದು ನಿಜಕ್ಕೂ ತಪವಾ? ಅದೊಂದು ಶಾಪವೇ ಸರಿ.

ಶಾಪ ಅಂದರೆ ಒಂಥರಾ ಭಯ. ಅದ್ಯಾವುದೋ ಚಾನಲ್ಲಿನಲ್ಲಿ ಬರುತ್ತಂತೆ ಪುನರ್ಜನ್ಮ.  ಹೋಗಿ ಕೇಳಲಾ? ನಾನು, ತರಲೆ ಮಾಡಿ ಭೂಮಿಗೆ ತಳ್ಳಿಸ್ಕೊಂಡ ಕಿನ್ನರಿಯ ಮಗಳಿರಬೇಕು. ಅಂವ ಕೈಯೊತ್ತಿ ಮುತ್ತಿಟ್ಟಾಗಲೇ ಶಾಪವಿಮೋಚನೆ!

ಆದರೆ,

ಅಂವ ಮತ್ತೆ ಇಲ್ಲ.

ಇರುವನಾದರೂ ಅವನಿಗೆ, ತಾನೇ ಶಾಪ ನೀಗಿಸುವ ಹುಡುಗ ಅಂತ ಗೊತ್ತಿದೆಯಾ!?

12 thoughts on “ಕೃಷ್ಣ ಸಿಗುವುದಿಲ್ಲ. ಅದಕ್ಕೇ, ರಾಧೆ ಕಾಯಲಿಲ್ಲ…

Add yours

  1. ಅಹ್ಹಾ! ಕಾಯುವೆಕೆಯ ಸೊಬಗನ್ನು ಅದೆಷ್ಟು ಚೆಂದವಾಗಿ ಹಿಡಿದಿಟ್ಟಿದ್ದೀರ! ವಿಪ್ರಲಂಭದ ಸೊಗಸೇ ಅಂಥದ್ದೇನೋ. ಶೃಂಗಾರಗಳಲ್ಲಿ ಅತ್ಯಂತ ಖುಷಿ ಕೊಡುವಂತದ್ದು ಅದುವೆ.
    ಕಾಳಿದಾಸನಿಗೂ, ಶಕುಂತಲೆಗೂ ಕೊಂಚ ಸಿಟ್ಟು ಬಂದರೂ ಬಂದೀತು 🙂 ಒಮ್ಮೆ ನಿಮ್ಮ ಲೇಖನದಲ್ಲಿ ಇಣುಕುವ ಚಾನ್ಸ್ ಮಿಸ್ ಆಗಿದ್ದಕ್ಕೆ 🙂

  2. chetana, tumba tumba tumba chennagide …
    nannadondu prashne, raadhege krishna nanna araadhisiddakke paschattaapa videya?

    did she repent anywhere?
    naanu hudukuttiddene ,nimage gottiddare raadha charitreya pustakada hesaru tilisi..odi bidutttene..

    thank you ,

  3. Hi,

    ಭಾವುಕವಾಗಿದೆ…
    ಎಲ್ಲಾ ಮರೆತು ಮತ್ತೆಲೋ ಇದ ಮನಸನ್ನು ಹಳೆಯ ನೆನಪಿನೆಡೆಗೆ ಕರೆದೊಯ್ದಿದೆ ನಿಮ್ಮಈ ಲೇಖನ…..
    ನೈಸ್ ಒನ್ 🙂

    ವೀಣಾ 🙂

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑