ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು


ನಾನೊಬ್ಬಳೇಇಲ್ಲಿ, ಹೀಗೆಕವಿತೆಗಳ ಜತೆಗೆ. ನನ್ನ ನೀವೆಲ್ಲ ಜತೆಯಾದವರುಕವಿತೆಗಳ ಜತೆಗೇ… ನನ್ನಾತ್ಮ ರತಿಗೆ ಒಸರಿಬಂದ ಅಕ್ಷರಗಳ ಸ್ರಾವ, ಒಡಲುಗಟ್ಟಿದೆಯಿಲ್ಲಿ ಕವಿತೆಗಳ ಹಾಗೆ. ಪ್ರತಿ ನೋವು ದುಃಖ ಸುಖ-ಎಲ್ಲದರ ಸಂಭೋಗ ಫಲ ಕೊಟ್ಟು ಹುಟ್ಟಿಬಂದಿದೆಸಾಲು ಸಂತಾನ. ಸುತ್ತಲಿನ ತಿಕ್ಕಲಿಗೆತೆರೆದ ಘಳಿಗೆಯ ಧ್ಯಾನ, ಸಂಸಾರ ವಿಷವೃಕ್ಷದಡಿಯಲ್ಲೆ ಅರಳಿ ತಬ್ಬಿದೆ ಜ್ಞಾನ ಅಥವಾ, ನನ್ನ ಅಜ್ಞಾನ. ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು, ಹುಳಿತು ಹದವಾಗಿನೊರೆಗಟ್ಟಿದೆ ಕವಿತೆ ನೋವ ಮರೆಸುವ ಮತ್ತು ತಂದಿತ್ತು. ಯಾರು ಹೇಳುವರು, ಪಾಪನಾನೊಂಟಿಯೆಂದು? ಬರಹ ಪ್ರೀತಿಯ ಸುಖಕೆ ಏಕಾಂತ ಬಯಸಿ ಪಡೆದೆ, ಹೀಗೆ ಲೋಕ ಮರೆತು… ಮರೆತ ಲೋಕದ ನೀವೀಗ ಬಂದಿರೆನ್ನ ಜತೆಗೆ. ಯಾಕೆಂದರೆ, ನಾನಿರುವೆನಿಲ್ಲಿ ಹೀಗೆ ಕವಿತೆಗಳ ಜತೆಗೆ…

ಮುಖಪುಟ

ಇದರ ಅಲೈನ್‌ಮೆಂಟು ಚೇಂಜಾದರೆ ಕವಿತೆ. ಹಾಗೆ ಆಗಿದೆ ಕೂಡ, ನನ್ನ ಹೊಸ  ‘ಗುಟ್ಟು ಬಚ್ಚಿಡಲು ಬರುವುದಿಲ್ಲ’ ಕವನ ಸಂಕಲನದಲ್ಲಿ. ಈ ಮೇಲಿನ ಸಾಲುಗಳು ಕವಿತೆಯಲ್ಲದೆಯೂ ನಿಜ. ಅವೆಲ್ಲವೂ ಖಾಲಿತಲೆಯ….. ಮಾತುಗಳೇ! ಜತೆಗೆ, ಆತ್ಮರತಿಗೆ ಒಸರಿದ ಅಕ್ಷರಗಳ ಸ್ರಾವವೂ. ಅದಕ್ಕೇ ಹೀಗೆ ಹಾಕಿಕೊಂಡೆ. ಇಷ್ಟೂ ದಿನ ಹೆಚ್ಚೂಕಡಿಮೆ ಮನಸಿಗೊಂದು ಕನ್ನಡಿ ಇಟ್ಟುಕೊಂಡು ಬರೆಯುವುದು ರೂಢಿಯಾಗಿತ್ತು. ಅದು, ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳುವ ದೃಷ್ಟಿಯಿಂದ ಒಳ್ಳೆಯದಲ್ಲ. ಇಂಥದೊಂದು ತಿಳುವಳಿಕೆ ಮೂಡಲು ತಡವೇನಾಗಿಲ್ಲ. 31 ವರ್ಷ ಅಂಥಾ ಜಾಸ್ತಿಯೇನಲ್ಲ!

ಹೀಗೆ ಕನ್ನಡಿ ನೋಡಿಕೊಂಡು ಬರೆಯುವಾಗ ಬೇರೆಯವರ ಬಿಂಬಗಳು ಕಂಡಿದ್ದೂ ಇದೆ. ಅದು ನಾನೇ ಅನ್ನುವ ಭ್ರಮೆಯಲ್ಲಿ ಹೊರಟ ಭಾವಗಳೂ ನನ್ನ ಕವಿತೆಗಳಲ್ಲಿ ಸೇರಿವೆ. ಆದರೂ ಸಾಕು ಈ ಕನ್ನಡಿಗಳ ಸಹವಾಸ.

ಸಂಕಲನದಲ್ಲಿ ಒಟ್ಟು 45ಕವಿತೆಗಳಿವೆ. ನಾನು ಬರೆಯುವಾಗೇನೋ ಆಸ್ಥೆಯಿಂದಲೇ ಬರೆದಿದ್ದು. ನಿಮಗಿಷ್ಟವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ, ಬರೆಯುವವರು ಎಷ್ಟೇ ತಮಗಾಗಿ, ತಮ್ಮ ತುಡಿತ ಹೊರಹಾಕುವುದಕ್ಕಾಗಿ ಬರೆಯುವುದು ಅಂತ ವಾದ ಮಾಡಿದರೂ, ಓದುಗನೊಬ್ಬ ಓದಿ ಮೆಚ್ಚಲೆಂದೋ ಕೊನೆಗೆ ಮೆಚ್ಚದೆ ಟೀಕೆಯಾದರೂ ಮಾಡಲೆಂದಾದರೂ ಆಶಿಸುತ್ತಾರೆ. ನಾನೂ ಹೀಗೇನೇ.

ನೀವು ಓದಿ, ಏನನ್ನಿಸಿತು ಹೇಳಿದರೆ ನನಗೆ ಖುಷಿ. ಅಂದಹಾಗೆ, ಈ ಪುಸ್ತಕ ಶನಿವಾರ 11ನೇ ತಾರೀಖು ಸಂಜೆ 6-7.30ತನಕ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗ್ತಿದೆ. ಅದು, ಶ್ರೀನಗರ ಪುಸ್ತಕೋತ್ಸವ ಉದ್ಘಾಟನಾ ಕಾರ್ಯಕ್ರಮ. ಸ್ಥಳ: ಸ್ನೇಹಾ ಬುಕ್ ಹೌಸ್ ಆವರಣ, ರಾಘವೇಂದ್ರ ಬ್ಲಾಕ್, 50ಫೀಟ್ ರೋಡ್, ಶ್ರೀನಗರ-ಗಿರಿನಗರ ರಸ್ತೆ. ಈ ಪುಸ್ತಕೋತ್ಸವ 11ರಿಂದ ಒಂದು ವಾರ ಕಾಲ ನಡೆಯಲಿದೆ. ಒಳ್ಳೊಳ್ಳೆ ಬುಕ್ಸ್, ಕಮ್‌ಕಮ್ಮಿ ಬೆಲೆಗೆ! ಹೇಳಿ, ಪುಸ್ತಕ ಕೊಳ್ಳೋ ಅಭ್ಯಾಸ ಉಂಟಾ!?

ಪ್ರೀತಿಯಿಂದ,

ಚೇತನಾ ತೀರ್ಥಹಳ್ಳಿ

15 thoughts on “ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು

Add yours

  1. ಹಾರ್ದಿಕ ಶುಭಾಶಯಗಳು. ನಾಳೆಯ ಕಾರ್ಯಕ್ರಮ ಚೆನ್ನಾಗಿ ಆಗ್ಲಿ ಅಂತ ಹಾರೈಸ್ತೀನಿ. ಪುಸ್ತಕೋತ್ಸವ ಒಂದು ವಾರ ಇದೆ ಅಂದ್ರಾ? ಒಂದು ದಿನವಾದ್ರೂ ಹೋಗೋಕಾಗುತ್ತಾ ನೋಡ್ಬೇಕು. “ಒಳ್ಳೊಳ್ಳೆ ಬುಕ್ಸ್, ಕಮ್‌ಕಮ್ಮಿ ಬೆಲೆಗೆ!” ಅಂತಿದ್ ಹಾಗೆ ಬಾಯಲ್ಲಿ ನೀರೂರ್ತಿದೆ 😉 ನಿಮ್ ಪುಸ್ತಕ, ಮತ್ತೆ ಬೇರೆ ಒಂದಿಷ್ಟ್ ಬುಕ್ಸ್ ತಗೊಳೋದಿದೆ. ತಿಳಿಸ್ಕೊಟ್ಟಿದ್ದಕ್ಕೆ ಥ್ಯಾಂಕ್ಯೂ.

  2. ಚೇತನಾ ….

    ಕೊನೆಗೂ ನಿಮ್ಮ ಗುಟ್ಟು ನೀವೇ ರಟ್ಟು ಮಾಡಿ ನಮ್ಮನ್ನೆಲ್ಲ ಆಶ್ಚರ್ಯಚಕಿತಗೊಳಿಸಿದ್ದೀರಾ !!!!
    “ಗುಟ್ಟು ಬಚ್ಚಿಡಲು ಆಗುವುದಿಲ್ಲ” ಕವನ ಸಂಕಲನದ ಶೀರ್ಷಿಕೆಯ ಕವಿತೆಯನ್ನು ಓದಿದೆ. ಅತ್ಯಂತ ಹೃದಯಸ್ಪರ್ಶಿಯಾಗಿದೆ. ಭಾವನೆಗಳನ್ನು ವ್ಯಕ್ತಪಡಿಸುವ ರೀತಿ, ಭಾವನೆಗಳಿಗೆ ಪದಗಳ ಮೂಸಿಯಲ್ಲಿ ಇಳಿಸುವ ನಿಮ್ಮ ಕಲೆಯು ನಿಜಕ್ಕೂ ಮನನೀಯವಾಗಿದೆ. ಹೃತ್ಪೂರ್ವಕ ಅಭಿನಂದನೆಗಳು
    -ಗಂಗಾಧರ

  3. ನಿಮ್ಮ ಬರೆಯೋ ರೀತಿನ ಯಾವಾಗಲೂ ಮೆಚ್ತೇನೆ. ಶುಭವಾಗಲಿ. ಪುಸ್ತಕ ಕೊಳ್ಳೋ ಅಭ್ಯಾಸ ಇದ್ದೀಯ ಕೇಳಿದೀರಿ.. ಕ್ಷಮಿಸಿ. ಕೊಳ್ಳೋ ಅಭ್ಯಾಸ ಅಲ್ಲ, ಓದೋ ಅಭ್ಯಾಸನೇ ಇಲ್ಲ.. ಅಭ್ಯಾಸ ಅಲ್ಲ ತಾಳ್ಮೆ ಇಲ್ಲ..

  4. ಧನ್ಯವಾದಗಳು ಚೇತನರವರೆ. ಈ ತರಹದ ಒಂದು ಕನ್ನಡದ ವೆಬ್ಸೈಟ್/ಬ್ಲಾಗ್ ಹುಡುಕುತಿದ್ದೆ. ನಿಮ್ಮ ಕವನಗಳನ್ನು ಓದಿ ತುಂಬ ಖುಷಿಯಾಯಿತು. ಇದೆ ರೀತಿ ಅತ್ಯುತ್ತಮ ಕವಿತೆಗಳು ನಿಮ್ಮಿಂದ ಮೂಡಿ ಬರಲಿ ಅಂತ ಹಾರೈಸುತೇನೆ.

    ಕರುಣಾಕರ, ಹೋಬರ್ಟ್, ಆಸ್ಟ್ರೇಲಿಯಾ

  5. ನಿಮ್ಮ ಪುಸ್ತಕ ’ಗುಟ್ಟು ಬಚ್ಚಿಡಲು ಬರುವುದಿಲ್ಲ ’ ಈಗಾಗಲೇ ಬಿಡುಗಡೆಯಾಗಿರುತ್ತದೆ. ಅನಿವಾರ್ಯತೆಗಳಿಂದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ನಿಮ್ಮ ಕೃತಿಗೂ ಮತ್ತು ಮುಂದಿನ ಎಲ್ಲಾ ಬರಹಗಳಿಗೂ ಶುಭಕೋರುತ್ತೇನೆ. ಅಭಿನಂದನೆಗಳು, ಅಭಿವಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.

  6. ಪುಸ್ತಕ ಓಡುವ ಮತ್ತು ಕೊಂದು ಕೊಳ್ಳುವ ಹುಚ್ಚು ಹವ್ಯಾಸ ನನಗೂ ಇದೇ

    ನಿಮ್ಮ ಕವನ ಸಂಕಲನ ಬಿಡುಗಡೆ ಆಗಿದೆ ಅನಿಸುತ್ತೆ

    ಇದೇ ರೀತಿ ನಿಮಿಂದ ಹೆಚ್ಚು ಹೆಚ್ಚು ಕವನಗಳ ಪುಸ್ತಕ ಹೊರ ಬರಲಿ

    ಶುಭವಾಗಲಿ

  7. ಚೇತನ ಅವರೇ ನಿಮ್ಮ “ಬಚ್ಚಿಟ್ಟ ಗುಟ್ಟು” ಗೆ ಅಭಿನಂದನೆಗಳು . ನಿಮ್ಮ ಬ್ಲಾಗ್ ಓದಿದೆ , ತುಂಬಾನೇ ಖುಷಿ ಕೊಟ್ಟಿದೆ. ನೀವು ಇನ್ನು ಇನ್ನು ಬರೆಯಿರಿ. ನನ್ನ ಅಭನಂದನೆಗಳು .

    ಅಶೋಕ್ ಕುಮಾರ್ ವಲದೂರ್ (ಅಕುವ)

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑