ಕನ್ಫೆಶನ್


ನಾನು ಬಹಳ ಇಷ್ಟಪಟ್ಟ ಬದುಕುಗಳಲ್ಲಿ ವಾಂಗರಿಯದ್ದೂ ಒಂದು. ಇಂಥವರಲ್ಲದೆ ನಮಗೆ ಇನ್ಯಾರು ತಾನೆ ಪ್ರೇರಣೆ? ಕೊನೆಪಕ್ಷ ಆ ದಿನವಾದರೂ ಒಂದು ಕ್ಷಣ ಮೌನದ ಗೌರವ ನನ್ನಿಂದ ಸಂದಾಯವಾಗಬೇಕಿತ್ತು.

ಬಹುಶಃ ಈ ಶಿರೋನಾಮೆಯಲ್ಲದೆ ಬೇರೆ ಯಾವುದೂ ಸರಿ ಹೊಂದೋದಿಲ್ಲ ಇಲ್ಲಿ.
ನಾನು ನಿಯಮಿತವಾಗಿ ಪೇಪರ್ ಓದೋದಿಲ್ಲ. ರೆಗ್ಯುಲರ್ ಆಗಿ ಟೀವಿ ನ್ಯೂಸ್ ನೋಡೋದು ಮತ್ತು ಪೇಪರ್ ಓದೋದನ್ನ ಬಿಟ್ಟು ಆರೇಳು ವರ್ಷಗಳಾಗಿಹೋಗಿವೆ. ಕಾರಣ ನೂರೆಂಟಿವೆ.
ಇಂಥ ನನ್ನ ಮೊಂಡುತನದಿಂದ ಹಲವಷ್ಟು ಸಂಗತಿಗಳು ತಡವಾಗಿ ಗೊತ್ತಾಗ್ತವೆ. ಹಾಗೆ ತಡವಾಗಿ ಗೊತ್ತಾದ ವಿಶಯಗಳು ಮಹತ್ವ ಕಳಕೊಂಡಿರ್ತವೇನೋ ಸರಿ. ಯಾವ ಭೂತವೂ ಭವಿಷ್ಯದ ಹೆಗಲೇರಲಾಗದು. ಆದರೂ ಕೆಲವೊಂದು ಸಂಗತಿಗಳಿಗೆ ಆಯಾ ಹೊತ್ತೇ ಸ್ಪಂದಿಸಬೇಕು. ಖುಷಿಪಡಲಾದರೂ ಸರಿ, ನೊಂದುಕೊಳ್ಳಲಾದರೂ ಸರಿ…
ಈ ಎಲ್ಲ ತಟವಟ, ವಾಂಗರಿ ಮಥಾಯಿ ಸಾವಿಗಾಗಿ.
ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಹೆಣ್ಣು ಮಕ್ಕಳ ಲಿಸ್ಟ್ ಹುಡುಕುತ್ತಿದ್ದಾಗಲೇ ಗೊತ್ತಾಗಿದ್ದು ಈ ಕಪ್ಪು ಹೆಣ್ಣುಮಗಳು ಸೆಪ್ಟೆಂಬರ್ 25ರಂದೇ ಇಲ್ಲವಾಗಿಬಿಟ್ಟಿದಾಳೆ ಅಂತ. ನಾನು ಬಹಳ ಇಷ್ಟಪಟ್ಟ ಬದುಕುಗಳಲ್ಲಿ ವಾಂಗರಿಯದ್ದೂ ಒಂದು. ಇಂಥವರಲ್ಲದೆ ನಮಗೆ ಇನ್ಯಾರು ತಾನೆ ಪ್ರೇರಣೆ? ಕೊನೆಪಕ್ಷ ಆ ದಿನವಾದರೂ ಒಂದು ಕ್ಷಣ ಮೌನದ ಗೌರವ ನನ್ನಿಂದ ಸಂದಾಯವಾಗಬೇಕಿತ್ತು.

ವಾಂಗರಿಯ ಯಶೋಗಾಥೆ ಶುರುವಾಗೋದು ಮರವೊಂದರ ದುರಂತ್ಯದಿಂದ. ಆಕೆ ಕಪ್ಪು ಗುಲಾಮನ ಮಗಳು. ಪಟ್ಟಣದಲ್ಲಿ ಓಡಾಟಕ್ಕೆ ಇದ್ದ ನಿಷೇಧ ಅವಳನ್ನು ಕಾಡಿನ ಹತ್ತಿರಕ್ಕೆ ತಂದಿತ್ತು. ಅಲ್ಲೊಂದು ದೈತ್ಯ ಮರದ ಕೆಳಗೆ ಅಮ್ಮನೊಟ್ಟಿಗೆ ಹರಟುತ್ತಲೋ ಗೆಳೆಯರೊಟ್ಟಿಗೆ ಆಡುತ್ತಲೋ ಕುಳಿತಿರುತ್ತಿದ್ದಳು ಮಥಾಯಿ. ಬೇರುಗಳು ಆಳಕ್ಕಿಳಿದು ನೀರು ಹೀರಿ ಆಕಾಶಕ್ಕೆ ರವಾನಿಸುವ ವಿಸ್ಮಯವನ್ನು ಅವಳ ಪುಟ್ಟ ಕಣ್ಣು ಶೋಧಿಸುತ್ತಿತ್ತು. ‘ನಮ್ಮ ಬದುಕಿಗಂತಲೇ ಈ ಮರಗಳು ಬದುಕಿವೆ!’ ವಾಂಗರಿಗೆ ಸ್ಪಷ್ಟವಾಗಿತ್ತು. ಆ ದೈತ್ಯ ಮರ ಕೊಡಲಿ ಸೋಕಿ ಉರುಳಿಬಿದ್ದಾಗ ವಾಂಗರಿಯೂ ಕುಸಿದುಹೋಗಿದ್ದಳು.
ಹಸಿರಿನೊಂದಿಗೆ ಆತ್ಮಸಂಬಂಧವಿರಿಸಿಕೊಂಡಿದ್ದ ವಾಂಗರಿ ಕಾಡಿನ ಕುರಿತು ಹೆಚ್ಚಿನ ತಿಳಿವಳಿಕೆ ಪಡೆಯಲೆಂದೇ ಶಿಕ್ಷಣ ಪಡೆಯಹೊರಟಿದ್ದು. ಅದು ಕೂಡ ಹೆಣ್ಣುಮಕ್ಕಳಿಗೆ, ಅದರಲ್ಲೂ ಗುಲಾಮರ ಮಕ್ಕಳಿಗೆ ವಿದ್ಯೆ ನಿಷೇಧಿಸಲಾಗಿದ್ದ ಬ್ರಿಟಿಷ್ ದಬ್ಬಾಳಿಕೆಯ ಕಾಲದಲ್ಲಿ.
ವಾಂಗರಿ ಮಥಾಯಿ ಮೊದಲ ಬಾರಿ ಜೈಲು ಸೇರಿದ್ದು ಹದಿನಾರನೆ ವಯಸ್ಸಿಗೆ, ಬ್ರಿಟಿಷ್ ಶೋಷಣೆಯ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ. ಅವರು ಮನುಷ್ಯರನ್ನ ಕತ್ತರಿಸಿ ಬಿಸಾಡ್ತಿದ್ದ ಹಾಗೇ ಮರಗಳನ್ನೂ ಕತ್ತರಿಸಿ ಬಿಸಾಡ್ತಿದ್ದರು. ತಮ್ಮ ನೌಕೂಲಕ್ಕೆ ಕಟ್ಟಡ- ರಸ್ತೆಗಳನ್ನ ನಿರ್ಮಿಸಿಕೊಳ್ಳಲು ಆಪ್ರಿಕಾದ ಮಳೆಕಾಡುಗಳ ಮಾರಣಹೋಮ ಮಾಡುತ್ತಿದ್ದರು. ಮನುಷ್ಯ ಸಂತಾನವಾದರೂ ಬೇಕಾದಷ್ಟು ಬೆಳೆಯುವುದು. ಜಾಗವೇ ಉಳಿಯದೆ ಮರಗಳು ಬೆಳೆಯುವುದೆಲ್ಲಿ?
ವಾಂಗರಿ ಮಥಾಯಿ ವಿಶಿಷ್ಟ ಎನಿಸೋದು ಇಲ್ಲೇ. ಅಮೆರಿಕ, ಜರ್ಮನಿಗಳಲ್ಲಿ ಓದಿ ಶಿಕ್ಷಣದ ಆತ್ಮವಿಶ್ವಾಸ ಪಡೆದಿದ್ದ ವಾಂಗರಿ, ಹೆಣ್ಣುಮಕ್ಕಳ ಸ್ಥಿತಿ ಸುಧಾರಣೆ, ಸ್ವಾವಲಂಬನೆ ಮತ್ತು ಪರಿಸರ ರಕ್ಷಣೆಗಳ ಸೂತ್ರ ರಚಿಸಿಕೊಂಡು ಗ್ರೀನ್ ಬೆಲ್ಟ್ ಚಳವಳಿಯ ಮೂಲಕ ಹೋರಾಟಕ್ಕಿಳಿದರು. ಹೆಜ್ಜೆಹೆಜ್ಜೆಗೂ ಬಂಧನ ಬಿಡುಗಡೆಗಳ ತೊಡಕು. ಎಲ್ಲವನ್ನೂ ಎದುರಿಸಿ ಗೆದ್ದು, ಬಹಳ ಸಾರ್ತಿ ಕೊಲೆಗಟುಕರ ಜಾಲಕ್ಕೆ ಸಿಲುಕಿ ಪಾರಾಗಿ, ಪಡೆದದ್ದು ಅದ್ಭುತ ಫಲಿತಾಂಶ.
ಇಂದು ಕೀನ್ಯಾದಲ್ಲಿ ಮಳೆಕಾಡುಗಳ ಪುನರ್‌ನಿರ್ಮಾಣವಾಗಿದೆ ಎಂದರೆ ಅದಕ್ಕೆ ವಾಂಗರಿ ಮಥಾಯಿಯ ಬದುಕಿನ ನೀರು ಗೊಬ್ಬರವಿದೆ.  ಈಕೆಯನ್ನ ಅಲ್ಲಿನ ಜನ ಪ್ರೀತಿಯಿಂದ ಟ್ರೀ ವುಮನ್ ಅಂತಲೇ ಕರೆಯುತ್ತಾರೆ. ಗಟ್ಟಿಗಿತ್ತಿಯಾದ ಈಕೆ ಐರನ್ ಲೇಡಿಯೂ ಹೌದು. ವಾಂಗರಿಯ ಮಥಾಯಿ (ಗಂಡ) ಇಂಥಾ ಗಟ್ಟಿಗಿತ್ತಿಯ ಜತೆ ಬಾಳೋದು ಕಷ್ಟ ಅಂತ ದೂರವಾಗಿಬಿಟ್ಟಿದ್ದರು. ಇವರದು ಸಮೂಹವನ್ನ ಬೆನ್ನಿಗಿಟ್ಟುಕೊಂಡು ಒಂಟಿ ಹೋರಾಟ. ಮನುಷ್ಯರ ನಾಡಿಮಿಡಿತ ಚೆನ್ನಾಗಿ ಗೊತ್ತಿದ್ದ ವಾಂಗರಿ, ‘ನಮ್ಮದೇ ಸ್ವಾರ್ಥಕ್ಕಾದರೂ ಮರಗಳನ್ನು ಉಳಿಸಿ’ ಎನ್ನುವ ಸ್ಲೋಗನ್ ಹೊತ್ತು ಜಗತ್ತು ಸುತ್ತಿದ್ದರು.

ಈಗ ವಾಂಗರಿ ಮಥಾಯಿ ಇಲ್ಲವಾಗಿದ್ದಾರೆ. ಅಂಥವರು ಇನ್ನೂ ನೂರಾರು ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ ಸರಿಯೇ. ಅವರೆಲ್ಲರಲ್ಲಿ, ಮುಂಬರುವ ಪೀಳಿಗೆಯಲ್ಲೂ ಅವರ ಹೋರಾಟದ ಕಸುವು, ಪರಿಸರ ಪ್ರೀತಿ ಹರಿದುಬರಲೆಂದು ಆಶಯ.

2 thoughts on “ಕನ್ಫೆಶನ್

Add yours

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑